ಬೆಂಗಳೂರು: ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರದ ವಿಜ್ಞಾನ ನಗರ ವಾರ್ಡ್ನಲ್ಲಿ ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಸೌಹಾರ್ದಯುತವಾಗಿ ಸಿಹಿ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಮಾಜದ ವಿವಿಧ ಸ್ತರಗಳ ಕೊಡುಗೆಯನ್ನು ಸ್ಮರಿಸುವ ವಿಶೇಷ ಪ್ರಯತ್ನವಾಗಿ, ಈ ಬಾರಿ ಪೌರಕಾರ್ಮಿಕರ ಜೊತೆಗೆ ಸರ್ಕಾರಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳಿಗೂ ಸಿಹಿ ಹಂಚಿ ಗೌರವ ಸಲ್ಲಿಸಲಾಯಿತು.
ಬಿ.ಪ್ಯಾಕ್ ಸಂಸ್ಥೆ (B.PAC) ಯ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಷಾ ಅವರ ದೂರದೃಷ್ಟಿಯಿಂದ ಕಳೆದ 7 ವರ್ಷಗಳಿಂದ ಬೆಂಗಳೂರಿನಲ್ಲಿ ಸಾವಿರಾರು ಪೌರಕಾರ್ಮಿಕರಿಗೆ ಸಿಹಿ ವಿತರಿಸುವ ಮೂಲಕ ಅವರಿಗೆ ಗೌರವ ನೀಡುವ ಕೆಲಸವನ್ನು ಸಂಸ್ಥೆ ಮಾಡುತ್ತಾ ಬಂದಿದೆ. ಈ ವರ್ಷದಿಂದ ಈ ಕಾರ್ಯಕ್ರಮಕ್ಕೆ ಹೊಸ ಆಯಾಮ ನೀಡಲಾಗಿದ್ದು, ಸಮಾಜಕ್ಕೆ ನಿರಂತರ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಕೊಡುಗೆಯನ್ನು ಗುರುತಿಸಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಸಮಾಜದ ಸೇವೆಗೆ ಕೃತಜ್ಞತೆ
ಈ ಕಾರ್ಯಕ್ರಮದ ಉಸ್ತುವಾರಿಯನ್ನು ಬಿ.ಪ್ಯಾಕ್ನ ಸದಸ್ಯೆ ಹಾಗೂ ಸಮಾಜ ಸೇವಕಿ ಸತ್ಯವಾಣಿ ಅವರು ವಹಿಸಿಕೊಂಡಿದ್ದರು. ಸಿಹಿ ಹಂಚಿ ಮಾತನಾಡಿದ ಅವರು, "ಸಮಾಜದಲ್ಲಿ ಪ್ರತಿನಿತ್ಯ ನಾವು ಇವರ ಸೇವೆಯನ್ನು ಪಡೆದುಕೊಳ್ಳುತ್ತೇವೆ. ಪೌರಕಾರ್ಮಿಕರಿಲ್ಲದಿದ್ದರೆ ನಾವೆಲ್ಲ ಬದುಕುವುದೇ ಕಷ್ಟವಾಗುತ್ತಿತ್ತು. ಅವರ ಉಪಕಾರಕ್ಕೆ ಪ್ರತಿಯೊಬ್ಬ ನಾಗರಿಕನೂ ಕೃತಜ್ಞರಾಗಿರಬೇಕು. ಈ ದೀಪಾವಳಿಯ ಮಹಾ ಪರ್ವದಲ್ಲಿ ಸಿಹಿ ನೀಡುವ ಮೂಲಕ ನಾವು ನಮ್ಮ ಗೌರವವನ್ನು ಮಾತ್ರ ನೀಡಿದ್ದೇವೆ ಹೊರತು, ಅವರು ಮಾಡುತ್ತಿರುವ ಉಪಕಾರವನ್ನು ತೀರಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜ್ ಅವರು ಭಾಗವಹಿಸಿ, ಬಿ.ಪ್ಯಾಕ್ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. "ಈ ಬಾರಿ ಸರ್ಕಾರಿ ನೌಕರರಿಗೆ ಮತ್ತು ಜನ ಪ್ರತಿನಿಧಿಗಳಿಗೂ ಸಿಹಿ ನೀಡುವ ಮೂಲಕ ಬಿ.ಪ್ಯಾಕ್ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಗೆ ಮಾಡಿದ್ದಾರೆ" ಎಂದು ಅವರು ನುಡಿದರು.
